ಕೊಡಗು ಎಂದ ತಕ್ಷಣ ನೆನಪಾಗುವುದು ಬೆಟ್ಟ, ಗುಡ್ಡ, ನದಿ, ತೊರೆ, ಕಾಡು, ಹಳ್ಳ, ಕೊಳ್ಳಗಳಿಂದಾವೃತವಾದ ನಿತ್ಯ ಹರಿದ್ವರ್ಣದ ವನಗಳಿಂದ ಕಂಗೊಳಿಸುವ ಪ್ರಕೃತಿ ಸೌಂದರ್ಯ. ಮಲೆನಾಡಿನ ಮಡಿಲೆಂದೇ ಬಣ್ಣಿಸಲ್ಪಡುವ ಕೊಡಗಿನಾದ್ಯಂತ ಮಳೆಗಾಲದಲ್ಲಿ ಅಲ್ಲಲ್ಲಿ ಸೃಷ್ಟಿಯಾಗುವ ಸಣ್ಣ ಸಣ್ಣ ಜಲಪಾತಗಳು ಹಾಗೂ ಚಳಿಗಾಲದ ಮಂಜು ಮುಸುಕಿದ ವಾತಾವರಣವು ಕೊಡಗಿಗೆ ಹೆಚ್ಚಿನ ಮೆರುಗನ್ನು ನೀಡಿರುತ್ತದೆ.
ಹಾಗೆ ನಿಸರ್ಗದ ಚೆಲುವನ್ನೆಲ್ಲ ತನ್ನ ಮಡಿಲಲ್ಲಿ ಹುದುಗಿಸಿಕೊಂಡಿರುವ ಕೊಡಗು, ಇಸ್ಲಾಮಿಕ್ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಸೂಫೀ ಶಹೀದ್ (ರ) ಎಂಬ ಸೂಫಿವರ್ಯರ ತ್ಯಾಗ ಮತ್ತು ಬಲಿದಾನಕ್ಕೆ ಸಾಕ್ಷಿಯಾಗಿ ವಿಶ್ವಾಸಿ ಸಮೂಹಕ್ಕೆ ಆದ್ಯಾತ್ಮಿಕ ಅನುಭೂತಿಯನ್ನೂ ನೀಡುತ್ತಿರುವ ಸ್ಥಳವಾಗಿದೆ.
ಕೊಡಗಿನ ಎಮ್ಮೆಮಾಡು ಎಂಬ ಸ್ಥಳದಲ್ಲಿರುವ ಮಖಾಮಿನಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಸೂಫೀ ಶಹೀದ್ (ರ) ಎಂಬ ಸೂಫೀವರ್ಯರೇ ಕೊಡಗಿನ ಪ್ರಕೃತಿ ಸೌಂದರ್ಯಕ್ಕೆ ಆಧ್ಯಾತ್ಮದ ಮೆರುಗನ್ನು ನೀಡಿದ ಮಹಾನರಾಗಿದ್ದಾರೆ.
ಸುಮಾರು ಮೂರೂವರೆ ಶತಮಾನಗಳ ಹಿಂದೆ ಪರಿಶುದ್ಧ ಇಸ್ಲಾಮಿನ ದಿವ್ಯ ಸಂದೇಶದೊಂದಿಗೆ ಇಲ್ಲಿಗಾಗಮಿಸಿದ ಈ ಮಹಾನರ ಪಾದಸ್ಪರ್ಶದಿಂದ ಪುನೀತವಾದ ನಾಡಾಗಿದೆ ಕೊಡಗಿನ ಎಮ್ಮೆಮಾಡು.
ಇಸ್ಲಾಮಿನ ನವೋತ್ಥಾನ ನಾಯಕರ ತವರೂರಾದ ಈಜಿಪ್ಟಿನ ಮಣ್ಣಿನಲ್ಲಿ ಜನ್ಮತಾಳಿದ ಸೂಫೀ ಶಹೀದ್ (ರ) ರವರು ತಮ್ಮ ಸಹೋದರಿಯೊಂದಿಗೆ (ಅದು ಸಹೋದರಿಯಲ್ಲ ಗುಲಾಮ ಸ್ತ್ರೀಯಾಗಿದ್ದರು ಎಂದೂ ಕೆಲ ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ) ಪರಿಶುದ್ಧ ಹಜ್ಜ್ ಕರ್ಮವನ್ನು ನಿರ್ವಹಿಸುವ ಸಲುವಾಗಿ ಮಕ್ಕಾಕ್ಕೆ ಹೋದವರು ಹಜ್ ನಿರ್ವಹಿಸಿ ಮದೀನಾಕ್ಕೆ ತೆರಳಿ ಪ್ರವಾದಿವರ್ಯರ ﷺِ ರ ರೌಳಾ ಶರೀಫ್ನಲ್ಲಿ ಝಿಯಾರತ್ ಮಾಡಿ ತಾಯಿನಾಡಾದ ಈಜಿಪ್ಟಿಗೆ ಹಿಂದಿರುಗುವ ಮನ್ನ ನಬಿ ﷺِ ರು ಮಹಾನರ ಕನಸಿನಲ್ಲಿ ಬಂದು ಭಾರತಕ್ಕೆ ಹೋಗಿ ದೀನೀ ದಅವಾ ನಡೆಸುವಂತೆ ನಿರ್ದೇಶನ ನೀಡಿದರು.
ಪೈಗಂಬರ್ ﷺِರಿಂದ ನಿರ್ದೇಶನ ಲಭಿಸಿದ್ದರಿಂದ ತಾಯಿನಾಡಿಗೆ ಹಿಂದಿರುಗದೆ ಮದೀನಾದಿಂದ ನೇರವಾಗಿ ಶ್ರೀಲಂಕಾಕ್ಕೆ ಹೋದರು. ಶ್ರೀಲಂಕಾದಲ್ಲಿ ಕೆಲಕಾಲವಷ್ಟೇ ಇದ್ದು ನಂತರ ಅಲ್ಲಿಂದ ಮೈಸೂರಿಗೆ ಬಂದರು.
ಹಾಗೆ ಮೈಸೂರಿಗೆ ಬಂದು ತಲುಪಿದ ಮಹಾನರು ಮೈಸೂರಿನ ಸಮೀಪದ ಕೈಲೂರ್ ಎಂಬಲ್ಲಿ ಕೆಲ ಕಾಲ ನೆಲೆಸಿದ್ದರು. ನಂತರ ತಮ್ಮ ಸಂಚಾರವನ್ನು ಮುಂದುವರೆಸಿದ ಅವರು, ಹಿಜ್ರಾ ಹನ್ನೊಂದನೆ ಶತಮಾನದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಸಮೀಪದ ಕುತ್ತನಾಡ್ ಎಂಬಲ್ಲಿರುವ ಹೊಳೆಯೊಂದರ ಪಕ್ಕದಲ್ಲಿ ವಾಸ್ತವ್ಯ ಹೂಡಿದರು. ಮಹಾನರೊಂದಿಗೆ ಅವರ ಸಹೋದರಿ ಅಥವಾ ಗುಲಾಮ ಸ್ತ್ರೀ ಎಂದು ಉಲ್ಲೇಖಿಸಲ್ಪಟ್ಟ ಮಹಿಳೆಯೂ ಇದ್ದರು.
ಅಂದು ಕುತ್ತನಾಡ್ ಎಂಬ ಪ್ರದೇಶವು ದಟ್ಟವಾದ ಅರಣ್ಯದಿಂದ ಆವೃತವಾಗಿತ್ತಲ್ಲದೆ ಆ ಅರಣ್ಯದಲ್ಲಿ ಸಿಂಹ, ಹುಲಿ, ಚಿರತೆ ಮತ್ತು ಕರಡಿಯಂತಹ ಕ್ರೂರ ಮೃಗಗಳ ಆವಾಸ ಸ್ಥಾನವಾಗಿತ್ತು. ಕ್ರೂರ ಮೃಗಗಳ ಭಯದಿಂದ ಜನ ಆ ಅರಣ್ಯದೊಳಗೆ ಬರುತ್ತಿರಲಿಲ್ಲ ಅಪರೂಪಕ್ಕೊಮ್ಮೆ ಶಸ್ತ್ರಸಜ್ಜಿತರಾದ ಬೇಟೆಗಾರರು ಬೇಟೆಯಾಡುವ ಸಲುವಾಗಿ ಕಾಡಿಗೆ ಬರುತ್ತಿದ್ದರು.
ಅಂತಹ ಗೊಂಡಾರಣ್ಯದಲ್ಲಿ ಸಹೋದರಿಯೊಂದಿಗೆ ವಾಸವಾಗಿದ್ದ ಮಹಾನರು ಇಲಾಹಿ ಸ್ಮರಣೆಯಲ್ಲಿ ದಿನಗಳೆಯುತ್ತಿದ್ದರು. ಹಾಗಿರಲೊಂದು ದಿನ ಆ ಗೊಂಡಾರಣ್ಯದಲ್ಲಿ ಬೇಟೆಯಾಡುವ ಸಲುವಾಗಿ ಕಾಡಿಗೆ ಬಂದ ಬೇಟೆಗಾರರ ತಂಡವೊಂದು ಕ್ರೂರ ಮೃಗಗಳ ಆವಾಸ ಸ್ಥಾನವಾಗಿರುವ ಗೊಂಡಾರಣ್ಯದ ನಡುವೆ ಆರಾಧನಾ ಮಗ್ನರಾಗಿರುವ ಮಹಾನರನ್ನು ಕಂಡು ಆಶ್ಚರ್ಯ ಚಕಿತರಾದರು
ಅದ್ಭುತ ಸಿದ್ಧಿಯಿರುವ ಅಲ್ಲಾಹನ ಇಷ್ಟದಾಸರ ಹೊರತು ಮತ್ಯಾರಿಗೂ ಈ ಕಾಡಿನ ನಡುವೆ ಇಷ್ಟೊಂದು ಧೈರ್ಯದಿಂದಿರಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಆ ಬೇಟೆಗಾರರು ಮಹಾನರ ಬಳಿ ಹೋಗಿ ಮಾತನಾಡಿಸಿದರು.
ಈಮಾನಿನ ಪ್ರಭೆಯಿಂದ ಕಂಗೊಳಿಸುತ್ತಿದ್ದ ಮಹಾನರ ಮುಖ ಕಂಡಾಗ ಈ ವ್ಯಕ್ತಿ ಸಾಮಾನ್ಯರಲ್ಲ ಎನ್ನುವುದು ವ್ಯಕ್ತವಾಗುತ್ತಿದ್ದಂತೆಯೇ ಬೇಟೆಗಾರರ ಗುಂಪಿನ ವ್ಯಕ್ತಿಯೊಬ್ಬರು ತಮ್ಮ ಮನೆಗೆ ಹೋಗಿ ಹಸುವಿನ ಹಾಲು ಮತ್ತು ಹಣ್ಣು ಹಂಪಲುಗಳನ್ನು ತಂದು ಮಹಾನರಿಗೆ ಕೊಟ್ಟರು. ಪ್ರೀತ್ಯಾದಾರಗಳಿಂದ ಆ ವ್ಯಕ್ತಿ ನೀಡಿದ ಆ ವಸ್ತುಗಳನ್ನು ಮಹಾನರು ಸ್ವೀಕರಿಸಿದರು.
ತದನಂತರ ತಮಗೆಲ್ಲರಿಗೂ ಪ್ರಾರ್ಥಿಸಬೇಕೆಂದು ಮನವಿ ಮಾಡಿದ ಆ ಬೇಟೆಗಾರರು ಅಲ್ಲಿಂದ ಹಿಂದಿರುಗಿದರು. ಅಂದು ಮಹಾನರಿಗೆ ಹಾಲು ಮತ್ತು ಹಣ್ಣು ಹಂಪಲುಗಳನ್ನು ತಂದು ಕೊಟ್ಟ ವ್ಯಕ್ತಿಯ ಬದುಕಿನಲ್ಲಿ ಅನಂತರ ಸುಖ ಸಂತೋಷ ಸಮೃದ್ಧಿ ಮತ್ತು ಐಶ್ವರ್ಯವು ಮನೆ ಮಾಡಿತು.
ಒಂದು ದಿನ ಮಹಾನರು ಒಂದು ಪಾತ್ರೆಯಲ್ಲಿ ಸ್ವಲ್ಪ ಮಣ್ಣು ಹಾಕಿ ಅದಕ್ಕೆ ನೀರು ಹಾಕಿ ಒಲೆಯ ಮೇಲಿಟ್ಟು ತಮ್ಮೊಂದಿಗಿದ್ದ ಸಹೋದರಿಯೊಂದಿಗೆ ಒಲೆಗೆ ಬೆಂಕಿ ಹಚ್ಚಲು ಹೇಳಿದರು. ಆ ಮಹಿಳೆಯು ಒಲೆಗೆ ಬೆಂಕಿ ಹಚ್ಚಿದರು. ಸ್ವಲ್ಪ ಸಮಯದ ನಂತರ ಪಾತ್ರೆಯಲ್ಲಿದ್ದ ಮಣ್ಣು ಅನ್ನವಾಗಿ ಮಾರ್ಪಟ್ಟಿತ್ತು! ನಂತರ ಮಹಾನರು ದೂರದಲ್ಲಿದ್ದ ಜಿಂಕೆಯೊಂದರತ್ತ ಕೈ ಸಂಹ್ನೆ ಮಾಡಿ ಕರೆದಾಗ ಆ ಜಿಂಕೆಯು ನಿರ್ಭಯದಿಂದ ಅವರ ಬಳಿಗೆ ಒಂದು ನಿಂತಿತು. ಆ ಜಿಂಕೆಯನ್ನು ದ್ಸಬಹ್ ಮಾಡಿದರು. ಈ ಘಟನೆಯನ್ನು ದೂರದಲ್ಲಿದ್ದ ಬೇಟೆಗಾರನೊಬ್ಬ ಗಮನಿಸುತ್ತಿದ್ದ.
ಈ ವ್ಯಕ್ತಿಯು ಸಾಮಾನ್ಯರಲ್ಲ ಎಂಬುದನ್ನು ಅರ್ಥಮಾಡಿಕೊಂಡ ಬೇಟೆಗಾರನು ಮಹಾನರ ಬಳಿ ಬಂದು ಕೈ ಹಿಡಿದು ಆಶೀರ್ವಾದ ಪಡೆದುಕೊಂಡು ಹೋದನು. (ಮಹಾನರ ಅಗತ್ಯಕ್ಕನುಗುಣವಾಗಿ ಜಿಂಕೆಗಳಂತಹ ಭಕ್ಷಿಸಲು ಯೋಗ್ಯವಾದ ಪ್ರಾಣಿಗಳು ಬಂದು ಮಹಾನರ ಬಳಿ ಬಂದು ನಿಲ್ಲುತ್ತವೆ. ಔಲಿಯಾಗಳ ಚರಿತ್ರೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಪ್ರಮಾಣಗಳ ಮೂಲಕ ಸಾಬೀತಾದ ಸಂಗತಿಯಾಗಿದೆ}
ಮಹಾನರು ಅಂದು ಅಡಿಗೆ ಮಾಡಿದ್ದ ಆ ಸ್ಥಳವನ್ನು ಹಾಗೆಯೆ ಸಂರಕ್ಷಿಸಲಾಗಿದೆ. ಪೊನ್ನಂಪೇಟೆಯ ಮಾಪಿಳತ್ತೋಡ್ ಜಮಾಅತ್ನ ನೇತೃತ್ವದಲ್ಲಿ ಅಲ್ಲಿ ಉರೂಸ್ ನಡೆಯುತ್ತದೆ. ಒಮ್ಮೆ ಕುತ್ತನಾಡಿನಲ್ಲಿ ಸೇತುವೆ ನಿರ್ಮಿಸುವ ಸಲುವಾಗಿ ಇಂಜಿನಿಯರ್ಗಳು ಬಂದು ಮಹಾನರು ಇಬಾದತ್ ನಡೆಸುತ್ತಿದ್ದ ಸ್ಥಳವನ್ನೂ ಒಳಗೊಂಡಂತೆ ಸೇತುವೆ ನಿರ್ಮಾಣದ ನಕ್ಷೆ ರೂಪಿಸಿದರು.
ಸೂಫೀ ಶಹೀದ (ರ)ರವರು ಆರಾಧನಾ ನಿರತರಾಗುತ್ತಿದ್ದ ಆ ಸ್ಥಳದಲ್ಲಿ ಸೇತುವೆ ನಿರ್ಮಿಸಬಾರದೆಂದು ಗ್ರಾಮಸ್ಥರೆಲ್ಲರೂ ಒಗ್ಗೂಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಆದರೆ ಗ್ರಾಮಸ್ಥರ ಮನವಿಯನ್ನು ಪುರಸ್ಕರಿಸದ ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ತಂದರು. ಅನಂತರ ಕಾಮಗಾರಿಯೂ ಆರಂಭವಾಯಿತು. ಆದರೆ ಹೊಳೆಯ ಮತ್ತೊಂದು ಕಡೆ ಹುಲಿಗಳು ಗುಂಪುಗೂಡಿ ಘರ್ಜಿಸಲಾರಂಭಿಸಿತು. ಇದನ್ನು ಕಂಡು ಭಯಭೀತರಾದ ಕೆಲಸಗಾರರು ಮತ್ತು ಅಧಿಕಾರಿಗಳು ಗತ್ಯಂತರವಿಲ್ಲದೆ ಕೆಲಸ ನಿಲ್ಲಿಸಿದರು.
ಇಂತಹ ಘಟನೆ ಒಮ್ಮೆಯಲ್ಲ ಹಲವಾರು ಬಾರಿ ಮರುಕಳಿಸಿದೆ. ಒಮ್ಮೆ ಹುಲಿಗಳ ಘರ್ಜನೆ ಕಂಡು ಕಾಮಗಾರಿ ನಿಲ್ಲಿಸಿದರೂ ಕೆಲ ತಿಂಗಳುಗಳ ನಂತರ ಮತ್ತೆ ಕಾಮಗಾರಿ ಆರಂಭಿಸುವ ಪ್ರಯತ್ನ ಮಾಡುತ್ತಿದ್ದಂತೆಯೇ ಹುಲಿಗಳು ಬಂದು ಘರ್ಜಿಸುತ್ತಿದ್ದವು ಕೊನೆಗೆ ಆ ಸ್ಥಳದಲ್ಲಿ ಸೇತುವೆ ನಿರ್ಮಿಸುವ ಯೋಜನೆಯನ್ನು ಕೈಬಿಟ್ಟ ಅಧಿಕಾರಿಗಳು ಬೇರೊಂದು ಸ್ಥಳದಲ್ಲಿ ಸೇತುವೆ ನಿರ್ಮಿಸಿದರು.
ಮಾತ್ರವಲ್ಲದೆ ಸೂಫೀ ಶಹೀದ್ (ರ)ರವರು ಆರಾಧನಾ ನಿರತರಾಗಿದ್ದ ಆ ಸ್ಥಳವನ್ನು ಸಂರಕ್ಷಿಸುವ ಸಲುವಾಗಿ ಅಧಿಕಾರಿಗಳು ಅಗತ್ಯವಿರುವ ವ್ಯವಸ್ಥೆಯನ್ನೂ ಮಾಡಿ ಕೊಟ್ಟರು.
ಕುತ್ತನಾಡಿನಲ್ಲಿ ಆರಾಧನಾ ಮಗ್ನರಾಗಿದ್ದ ಸೂಫೀ ಶಹೀದ್ (ರ)ರವರು ಅನಂತರ ಕುತ್ತನಾಡಿನಿಂದ ಹೊರಟು ಭಾಗಮಂಡಲ ಸಮೀಪದ ತಾವೂರು ಎಂಬಲ್ಲಿಗೆ ಹೋದರು. ಅಲ್ಲಿ ಕೆಲವು ವರ್ಷಗಳ ಕಾಲ ಆರಾಧನೆ ನಡೆಸಿದ ನಂತರ ಎಮ್ಮೆಮಾಡಿಗೆ ಹೋದರು.
ಮಹಾನರ ಸದ್ಗುಣ ಸಂಪನ್ನತೆ, ತ್ಯಾಗ ಮನೋಭಾವ ಜಾತಿ ಮತ ಭೇದವಿಲ್ಲದ ನಿಷ್ಕಳಂಕವಾದ ಸೇವೆಯನ್ನು ಕಂಡು ಮಹಾನರು ಹೋದಲ್ಲೆಲ್ಲ ಬಹಳಷ್ಟು ಮಂದಿ ಇಸ್ಲಾಮ್ ಸ್ವೀಕರಿಸಲಾರಂಭಿಸಿದರು. ಜನರು ತಂಡೋಪತಂಡವಾಗಿ ಇಸ್ಲಾಂ ಸ್ವೀಕರಿಸುತ್ತಿರುವುದನ್ನು ಕಂಡಾಗ ಕೆಲವರಿಗೆ ಇದು ಸಹ್ಯವಾಗಲಿಲ್ಲ. ಹೇಗಾದರೂ ಮಾಡಿ ಮಹಾನರನ್ನು ಮುಗಿಸಬೇಕೆಂದು ಅವರು ತೀರ್ಮಾನಿಸಿದರು.
ಆದರೆ ನೇರವಾಗಿ ಮಹಾನರ ಮೇಲೆ ದಾಳಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಂದರೆ ಮಹಾನರ ಮೇಲೆ ಗುಂಡು ಹೊಡೆದರೆ ಆ ಗುಂಡುಗಳು ಅವರ ಮೈಗೆ ತಾಗುತ್ತಿರಲಿಲ್ಲ. ಹಾಗಾಗಿ ನೇರವಾಗಿ ಮಹಾನರನ್ನು ಎದುರಿಸಲಾಗದ ಶತ್ರುಗಳು ಕುಟಿಲ ತಂತ್ರದ ಮೂಲಕ ಮುಗಿಸಲು ಸಂಚು ಹೂಡಿದರು.
ಮಹಾನರ ಮೈಗೆ ಗುಂಡು ತಾಗದಿರಲು ಕಾರಣವೇನೆಂಬುದನ್ನು ತಿಳಿಯುವ ಸಲುವಾಗಿ ಹಾಗೂ ಯಾವ ರೀತಿಯಲ್ಲಿ ದಾಳಿ ಮಾಡಿದರೆ ಮಹಾನರನ್ನು ಮಣಿಸಬಹುದೆಂಬ ಸತ್ಯ ಮಹಾನರೊಂದಿಗಿರುವ ಮಹಿಳೆಗೆ ತಿಳಿದಿರಬಹುದೆಂಬುದನ್ನು ಅರಿತ ಶತ್ರುಗಳು ಆ ಮಹಿಳೆಯ ವಿಶ್ವಾಸಗಳಿಸಿ ಉಪಾಯದಿಂದ ಅವರೊಂದಿಗೆ ಕೇಳಿದಾಗ ಶತ್ರುಗಳ ಕುತಂತ್ರದ ಅರಿವಿದ್ದೋ ಇಲ್ಲದೆಯೋ ಶತ್ರುಗಳಿಗೆ ಆ ಮಹಿಳೆ ಆ ರಹಸ್ಯದ ಬಗೆಗಿನ ಮಾಹಿತಿ ನೀಡಿದರು.
ಅದೇನೆಂದರೆ ಮಹಾನರೊಂದಿಗೆ ಒಂದು ವಿಶೇಷವಾದ ಆಯುಧವಿತ್ತು. ಆ ಆಯುಧವಿರುವಾಗ ಶತ್ರುಗಳಿಗೆ ಅವರ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ. ನಮಾಝ್ ನಿರ್ವಹಿಸುವಾಗ ಹಾಗೂ ಆಹಾರ ಸೇವನೆ ಮಾಡುವಾಗ ಮಾತ್ರ ಮಹಾನರು ಆ ಆಯುಧವನ್ನು ಕೆಳಗಿಡುತ್ತಾರೆ. ಎಂದಾಗಿತ್ತು ಆ ರಹಸ್ಯ ಮಾಹಿತಿ.
ಈ ರಹಸ್ಯದ ಸುಳಿವು ಸಿಕ್ಕಿದ ಶತ್ರುಗಳು ಮಹಾನರ ಬಳಿ ಆ ಆಯುಧವಿಲ್ಲದ ಸಮಯ ನೋಡಿ ಅವರ ಮನೆಯ ಬಳಿಯೇ ಮಹಾನರ ಮೇಲೆ ಗುಂಡು ಹಾರಿಸಿದರು. ಶತ್ರುವಿನ ಗುಂಡು ಗುರಿ ತಪ್ಪದೆ ನೇರವಾಗಿ ಮಹಾನರ ದೇಹಕ್ಕೆ ತಾಗಿತು.
ತಮ್ಮ ರಹಸ್ಯ ಆಯುಧದ ಬಗ್ಗೆ ತಿಳಿದಿರುವ ಮಹಿಳೆಯೇ ಈ ರಹಸ್ಯವನ್ನು ಶತ್ರುಗಳಿಗೆ ತಿಳಿಸಿರಬಹುದು ಹಾಗಾಗಿಯೇ ಶತ್ರುಗಳು ತಕ್ಕ ಸಮಯ ನೋಡಿ ಹೊಂಚು ಹಾಕಿ ದಾಳಿ ಮಾಡಿದ್ದಾರೆಂಬುದನ್ನು ಗ್ರಹಿಸಿದ ಮಹಾನರು ಅಲ್ಲಿಂದ ನರಳಾಡುತ್ತಾ ಇಪ್ಪತ್ತೆರಡು ಕಿ.ಮೀ ದೂರ ಹೋಗಿ ಅಲ್ಲಿದ್ದ ಬಂಡೆಗಲ್ಲೊಂದರ ಮೇಲೆ ಕಿಬ್ಲಾಕ್ಕೆ ಅಭಿಮುಖವಾಗಿ ಮಲಗಿದರು.
ಅಲ್ಲಾಹನು ತನ್ನ ಇಷ್ಟದಾಸರಿಗೆ ಅವರು ತಿಳಿಯದ ಅನೇಕ ದಾರಿಯ ಮೂಲಕ ಹಸಿವು ಮತ್ತು ದಾಹವನ್ನು ತೀರಿಸುವನು ಎಂಬ ಕುರ್ಆನಿನ ಸೂಕ್ತಿಯಂತೆ ಮಹಾನರು ಮಲಗಿದ್ದ ಬಂಡೆಗಲ್ಲಿನ ಬಳಿಗೆ ಒಂದು ಹಸು ಧಾವಿಸಿ ಬಂದು سبحاالّله ತನ್ನ ಕೆಚ್ಚಲನ್ನು ಮಹಾನರ ಬಾಯಿಗಿಟ್ಟು ಹಾಲು ಕುಡಿಯಲು ಅನುವು ಮಾಡಿ ಕೊಟ್ಟಿತು. ಸೂಫೀ ಶಹೀದರು (ರ) ತಮ್ಮ ಹಸಿವು ಮತ್ತು ದಾಹ ತೀರುವಷ್ಟು ಹಾಲನ್ನು ಕುಡಿದ ನಂತರ ಹಸು ಅಲ್ಲಿಂದ ಮರಳಿತು.
ಮಹಾನರು ಮನದಲ್ಲೇ ಅಲ್ಲಾಹನಿಗೆ ದ್ಸಿಕ್ರ್ ಮತ್ತು ಶುಕ್ರ್ ಹೇಳುತ್ತಾ ಅಲ್ಲೇ ಮಲಗಿದ್ದರು. ಮರುದಿನವೂ ಹಸು ಅದೇ ರೀತಿ ತನ್ನ ಕೊರಳಿಗೆ ಕಟ್ಟಿದ ಹಗ್ಗವನ್ನು ಹರಿದುಕೊಂಡು ಬಂದು ಮಹಾನರಿಗೆ ಹಾಲುಣಿಸಿ ಹೋಯಿತು. ಈ ಹಸು ಮಹಾನರು ಮಲಗಿದ್ದ ಸ್ಥಳದಿಂದ ಎರಡು ಕಿಮೀ ದೂರದ ಗ್ರಾಮದಲ್ಲಿರುವ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿತ್ತು.
ಎರಡು ದಿನವೂ ಹಸು ಕಟ್ಟಿದ್ದ ಹಗ್ಗದ ಸಮೇತ ಎತ್ತಲೋ ಹೋಗುತ್ತಿರುವುದನ್ನು ಗಮನಿಸಿದ ಅದರ ಯಜಮಾನ ಮೂರನೆ ದಿನ ಕಬ್ಬಿಣದ ಸಂಕೋಲೆಯಲ್ಲಿ ಹಸುವನ್ನು ಕಟ್ಟಿಹಾಕಿ ಅದನ್ನು ಗಮನಿಸಲಾರಂಭಿಸಿದ.
ಮೂರನೇ ದಿನವು ಆ ಹಸು ಹಟ್ಟಿಯಿಂದ ಕೊರಳಿಗೆ ಕಟ್ಟಿದ ಸಂಕೋಲೆಯನ್ನು ಹಾಗೆಯೇ ಎಳೆದುಕೊಂಡು ಓಡಿಹೋಗುತ್ತಿರುವುದನ್ನು ಗಮನಿಸಿದ ಅದರ ಯಜಮಾನನು ಹಸುವನ್ನು ಹಿಂಬಾಲಿಸ ತೊಡಗಿದ. ಆತನೊಬ್ಬ ಹಿಂದೂ ಸಹೋದರನಾಗಿದ್ದ. ಹಸುವನ್ನು ಹಿಂಬಾಲಿಸಿಕೊಂಡು ಬಂದ ಆತ ಗುಂಡೇಟು ತಗುಲಿ ಬಂಡೆಯ ಮೇಲೆ ಮಲಗಿರುವ ಮಹಾನರಿಗೆ ತನ್ನ ಹಸು ಹಾಲುಣಿಸುತ್ತಿರುವ ರೋಮಾಂಚಕಾರಿಯಾದ ಆ ದೃಶ್ಯವನ್ನು ಕಂಡು ಆಶ್ಚರ್ಯಚಕಿತನಾದ.
ತಕ್ಷಣವೇ ಆ ವ್ಯಕ್ತಿಯು ಮಹಾನರ ಬಳಿ ಹೋದನು. ಆಗ ಮಹಾನರು ತಮ್ಮ ಬಳಿ ಇದ್ದ ಬಟ್ಟೆಯೊಂದನ್ನು ಆ ವ್ಯಕ್ತಿಯ ಕೈಗಿತ್ತು ಸ್ವಲ್ಪ ನೀರು ತರುವಂತೆ ಸೂಚಿಸಿದರು. ಪಕ್ಕದಲ್ಲೇ ಹರಿಯುತ್ತಿದ್ದ ತೊರೆಯತ್ತ ತೆರಳಿದ ಆ ವ್ಯಕ್ತಿಯು ಮಹಾನರು ಕೊಟ್ಟ ಬಟ್ಟೆಯಲ್ಲಿ ನೀರನ್ನು ಶೇಖರಿಸಿ ತಂದನಾದರೂ ಮಹಾನರ ಬಳಿ ತಲುಪುವಾಗ ನೀರೆಲ್ಲ ಸೋರಿ ಹೋಗುತ್ತು. ಮತ್ತೊಮ್ಮೆ ತೊರೆಗೆ ಹೋಗಿ ನೀರು ತಂದನು. ಈ ಬಾರಿಯೂ ಮಹಾನರ ಬಳಿ ತಲುಪುವಾಗ ನೀರೆಲ್ಲ ಸೋರಿ ಹೋಗಿತ್ತು. ನಿರಾಶನಾದ ಆ ವ್ಯಕ್ತಿಯು ಮೂರನೆ ಬಾರಿ ತೊರೆಯತ್ತ ಧಾವಿಸಿ ನೀರು ಸೋರದಂತೆ ಬಹಳ ಜಾಗ್ರತೆಯಿಂದ ನೀರಿನೊಂದಿಗೆ ಮಹಾನರ ಬಳಿ ಬಂದನು. ಆದರೆ ಅಷ್ಟರಲ್ಲಾಗಲೇ ಮಹಾನರು ಸೃಷ್ಟಿಕರ್ತನಾದ ಅಲ್ಲಾಹನ ಅನುಲ್ಲಂಘನೀಯವಾದ ವಿಧಿಯ ಕರೆಗೆ ಓಗೊಟ್ಟು ವಿಧಿವಶವಾಗಿದ್ದರು.
ಸೂಫೀ ಶಹೀದ್ (ರ) ರವರು ಶಹೀದಾಗಿದ್ದು ಹಿಜ್ರಾ 1054 ಶಅಬಾನ್ ತಿಂಗಳ ಒಂದು ಶುಕ್ರವಾರದ ದಿನ ಆಗಿತ್ತು.
ಮೇಲೆ ಹೇಳಿದಂತೆ ಮಹಾನರು ಮಲಗಿದ್ದ ಬಂಡೆಗಲ್ಲಿನಿಂದ ಎರಡು ಕಿಮೀ ದೂರದಲ್ಲಿ ಚಿಕ್ಕ ಗ್ರಾಮವೊಂದಿತ್ತು. ಅಲ್ಲಿ ಮುಸ್ಲಿಮರೂ ವಾಸವಾಗಿದ್ದರು. ಹಸುವಿನ ಯಜಮಾನನು ಅಲ್ಲಿಗೆ ಹೋಗಿ ವಿಷಯ ತಿಳಿಸಿದಾಗ ತಂಡೋಪತಂಡವಾಗಿ ಬಂದ ಜನತೆ ಮಹಾನರ ಜನಾಝದ ಸ್ನಾನ ಮಾಡಿಸಿ ದಫನ ಮಾಡಲೆಂದು ಖಬರ್ ತೋಡುವಾಗ ಎಲ್ಲೆಲ್ಲೂ ಕಲ್ಲು ಬಂಡೆಗಳೇ ಸಿಗಲಾರಂಭಿಸಿ ಖಬರ್ ತೋಡಲಾಗದಿದ್ದಾಗ ಜನತೆ ಮಹಾನರ ಜನಾಝದ ಬಳಿ ಬಳಿ ಬಂದು, ಮಹಾನರೇ ಖಬರ್ ತೋಡಲು ಸಾಧ್ಯವಾಗುತ್ತಿಲ್ಲ ಇದಕ್ಕೆ ತಾವೇ ಒಂದು ಪರಿಹಾರ ಸೂಚಿಸಬೇಕೆಂದು ಮನವಿ ಮಾಡಿದಾಗ ಮಹಾನರ ಹಣೆಯಿಂದ ಒಂದು ಹನಿ ರಕ್ತ ಚಿಮ್ಮಿ ಒಂದೆಡೆ ಬಿತ್ತು. ರಕ್ತದ ಹನಿ ಬಿದ್ದ ಸ್ಥಳದಲ್ಲಿ ಅಗೆದಾಗ ಕಲ್ಲುಗಳು ಸಿಗದ ಕಾರಣ ಅಲ್ಲೇ ಖಬರ್ ತೋಡಿ ಧಫನ ಮಾಡಲಾಯಿತು. ರಕ್ತದ ಹನಿ ಬಿದ್ದ ಆ ಸ್ಥಳದಲ್ಲೇ ಮಹಾನರು ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
ಆಧುನಿಕ ಕಾಲದ ಜನತೆಗೆ ಸೂಫಿ ಶಹೀದ್ (ರ) ರವರ ಜನಾಝವನ್ನು ಸ್ನಾನ ಮಾಡಿಸಿದ್ದ ಸ್ಥಳದ ಬಗೆಗಿನ ಮಾಹಿತಿಯಿರಲಿಲ್ಲ. ಆ ಕೊರತೆಯನ್ನು ನೀಗಿಸಿದ್ದು ಸೂಫೀ ಸರಣಿಯಲ್ಲಿ ಅತ್ಯುನ್ನತವಾದ ಸ್ಥಾನಕ್ಕೆ ತಲುಪಿದ್ದ ಆಧುನಿಕ ಸೂಫೀವರ್ಯರಾದ ಕುತುಬುಲ್ ಆಲಂ ವಲಿಯುಲ್ಲಾಹಿ ಮರ್ಹೂಂ ಶೈಖುನಾ ಸಿ.ಎಂ ಮಡವೂರ್ (ರ) ಆಗಿದ್ದಾರೆ.
ಎಮ್ಮೆಮಾಡು ಮಖಾಮಿನ ಝಿಯಾರತ್ಗೆ ಆಗಾಗ ಆಗಮಿಸುತ್ತಿದ್ದ ಶೈಖುನಾ ಸಿಎಂ ಮಡವೂರ್ (ರ) ರವರು ಸೂಫೀ ಶಹೀದ್ (ರ) ರವರ ಜನಾಝವನ್ನು ಸ್ನಾನ ಮಾಡಿಸಿದ್ದ ಸ್ಥಳದ ಬಗೆಗಿನ ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ.
ಸೂಫೀ ಶಹೀದ್ (ರ)ರವರ ಮಕ್ಬರಕ್ಕೆ ಹೋಗುವ ದಾರಿಯ ಎಡಬಲಗಳಲ್ಲಿ ಎರಡು ಮಖಾಂಗಳಿವೆ. ಆದರಲ್ಲೊಂದು ಮಖಾಂ "ಸಯ್ಯಿದ್ ಹಸನ್ ಸಖಾಫ್ ಅಲ್ ಹಳ್ರಮಿ (ರ)." ಎಂಬ ಸಯ್ಯಿದ್ ಕುಟುಂಬದ ಮಹಾನರದ್ದಾಗಿದೆ. ಯಮನಿನ ಹಳರ್ ಮೌತ್ತಿನಿಂದ ಕೇರಳಕ್ಕೆ ಆಗಮಿಸಿ ಕಾಸರಗೋಡು ಜಿಲ್ಲೆಯ ಆದೂರಿನಲ್ಲಿ ವಾಸವಾಗಿದ್ದ ಈ ಮಹಾನರು ನಂತರ ಎಮ್ಮೆಮಾಡಿಗೆ ಬಂದು ಅಲ್ಲೇ ವಫಾತಾಗಿ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
ಅವರ ಕುಟುಂಬಸ್ಥರು ಈಗಲೂ ಆದೂರಿನಲ್ಲಿ ವಾಸವಾಗಿದ್ದಾರೆ.
ಒಂದು ಕಾಲದಲ್ಲಿ ಕುಗ್ರಾಮವಾಗಿದ್ದ ಎಮ್ಮೆಮಾಡಿನ ಸೂಫೀ ಶಹೀದ್ (ರ) ರವರ ಬರ್ಕತ್ನಿಂದ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಧಾರ್ಮಿಕ ಮತ್ತು ಸಾಮಾಜಿಕ ವಿದ್ಯಾ ಕೇಂದ್ರವಾಗಿ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಇಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕವನ್ನೂ ಪಡೆಯುವ ಸೌಲಭ್ಯವಿದೆ. ಇದರೊಂದಿಗೆ ಸೂಫಿ ಶಹೀದ್ (ರ) ರವರ ಹೆಸರಿನಲ್ಲಿ "ಶಹೀದಿಯ" ಎಂಬ ಅನಾಥ ಮತ್ತು ಬಡ ಮಕ್ಕಳ ವಸತಿ ಗೃಹವನ್ನು ಕೂಡ ನಡೆಸಿಕೊಂಡು ಬರಲಾಗುತ್ತಿದೆ . ಈ ವಸತಿ ಗೃಹದಲ್ಲಿ ಆಶ್ರಯ ಪಡೆದಿರುವ ಅನಾಥ ಮತ್ತು ಬಡ ಮಕ್ಕಳಿಗೆ ತಾವು ಅನಾಥರು ಮತ್ತು ನಿರ್ಗತಿಕರೆಂಬ ಭಾವನೆ ಬರದಂತೆ ಉಚಿತ ಊಟ, ಪುಸ್ತಕ ಸೇರಿದಂತೆ ಸಕಲ ಸವಲತ್ತನ್ನೂ ನೀಡಿ ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ನೀಡಲಾಗುತ್ತಿದೆ.
ಇನ್ನು ಇಲ್ಲಿರುವ ಮಸೀದಿಯಂತೂ ಬಹಳ ಸುಂದರವಾಗಿದ್ದು ಜಿಲ್ಲೆಯಲ್ಲಿರುವ ಮಸೀದಿಗಳ ಪೈಕಿ ಇದು ಅತಿ ದೊಡ್ಡದಾದ ಮಸೀದಿಯಾಗಿದೆ. ಸುಮಾರು ಒಂದು ಕೋಟಿ ರೂಪಾಯಿಗಳಿಗೂ ಮಿಕ್ಕಿದ ಖರ್ಚಿನಲ್ಲಿ ನಿರ್ಮಿಸಲಾಗಿರುವ ಈ ಮಸೀದಿಯಲ್ಲಿ ಏಕಕಾಲಕ್ಕೆ ಸಾವಿರಾರು ಮಂದಿ ಒಟ್ಟಿಗೆ ಪ್ರಾರ್ಥನೆ ಸಲ್ಲಿಸುವಷ್ಟು ವಿಶಾಲತೆಯನ್ನು ಹೊಂದಿದೆ .
ಮರಣಾಸನ್ನ ವೇಳೆಯಲ್ಲಿ ಹಾಲುಣಿಸಿದ್ದು ಒಂದು ಹಸುವಾಗಿದ್ದರಿಂದ ಆ ವರ್ಗಕ್ಕೆ ಸೇರಿದ ಸಾಕು ಪ್ರಾಣಿಗಳನ್ನು ಇಲ್ಲಿ ಹತ್ಯೆ ಮಾಡುವುದಿಲ್ಲ. ಗೋವುಗಳು, ಆಡು ಮುಂತಾದ ಸಾಕು ಪ್ರಾಣಿಗಳಿಗೆ ತಗುಲುವ ರೋಗಗಳಿಗೆ ಇಲ್ಲಿನ ಹರಕೆಯಿಂದ ಬೇಗನೇ ಗುಣಮುಖವಾಗುವುದು ಕೂಡ ಇಲ್ಲಿನ ವಿಶೇಷತೆಯಾಗಿದೆ.
ಗೋವುಗಳಿಗೆ ಮಾತ್ರವಲ್ಲದೆ ಜನಸಾಮಾನ್ಯರಿಗೂ ಸಹ ಗುಣಮುಖವಾಗದ ಮಾರಕ ರೋಗಕ್ಕೆ ತುತ್ತಾದವರಿದ್ದರೆ ಅಂಥವರು ಸೂಫೀ ಶಹೀದ್ (ರ) ರವರ ಹೆಸರಿನಲ್ಲಿ ಅಕ್ಕಿಯನ್ನು ಹರಕೆ ಮಾಡಿದರೆ ರೋಗ ಶಮನವಾಗುತ್ತದೆ. ಮಹಾನರ ಕರಾಮತ್ತಿನ ಬಗ್ಗೆ ಬರೆಯಲಾರಂಭಿಸಿದರೆ ಮುಗಿಯಲಾರದಷ್ಟಿವೆ. ಮಹಾನರ ಕರಾಮತ್ತಿನಿಂದಾಗಿ ಎಮ್ಮೆಮಾಡನ್ನು ಕೊಡಗಿನ ಮಕ್ಕಾ ಎಂದೇ ಕರೆಯಲಾಗುತ್ತದೆ.
ಪರಿಶುದ್ಧ ಇಸ್ಲಾಂ ದೀನೀನ ಪ್ರಚಾರದೊಂದಿಗೆ ಜನಸಾಮಾನ್ಯರಿಗೆ ಧರ್ಮೋಪದೇಶ ನೀಡುತ್ತಾ ಸೂಫೀ ಸರಣಿಯಲ್ಲಿ ಅತ್ಯುನ್ನತವಾದ ಸ್ಥಾನಕ್ಕೆ ಪಾತ್ರರಾಗಿ ಕೊನೆಗೆ ಶತ್ರುಗಳ ಕುತಂತ್ರಕ್ಕೆ ಬಲಿಯಾಗಿ ಹುತಾತ್ಮರಾದ ಸೂಫೀ ಶಹೀದ (ರ) ಮಖಾಮಿನಲ್ಲಿ ಪ್ರತಿವರ್ಷ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಉರೂಸ್ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.
ಎಮ್ಮೆಮಾಡು ಮಖಾಮಿನ ಉರೂಸ್ ಕೇರಳ ಮತ್ತು ಕರ್ನಾಟಕಗಳಲ್ಲಿ ಬಹಳ ಹೆಸರುವಾಸಿಯಾಗಿದೆ ಸೂಫೀ ಶಹೀದ (ರ) ಉರೂಸಿನ ಪ್ರಾರಂಭದಿಂದ ಆರು ದಿನಗಳ ಕಾಲ ಇಲ್ಲಿ ಕುರ್ಆನ್ ಖತಂ ಪಾರಾಯಣ ಮಾಡಲಾಗುತ್ತದೆ. ಏಳನೇ ದಿನ ಸಾದಾತ್ಗಳು ಮತ್ತು ಸೂಫೀವರ್ಯರುಗಳ ದೊಡ್ಡ ಸಂಘವೊಂದು ಖತಂ ದುಆ ನಡೆಸುತ್ತದೆ ಮತ್ತು ಮಹಾತ್ಮರ ಗುಣಗಾನಗಳನ್ನೂಳಗೊಂಡ ಮಾಲೆ, ಮೌಲಿದ್ಗಳ ಆಲಾಪನೆ ನಡೆಯುತ್ತದೆ.
ಉರೂಸಿನ ಸಮಯದಲ್ಲಿ ಉರೂಸಿನ ಪ್ರಾರಂಭದಿಂದ ಕೊನೆಯ ತನಕವೂ ಪ್ರವಚನ ದ್ಸಿಕ್ರ್ ಕೂಟ, ಕೂಟು ಝಿಯಾರತ್, ಕುರ್ಆನ್ ಪಾರಾಯಣ, ದಾನಧರ್ಮ ಮುಂತಾದ ಸತ್ಕರ್ಮಗಳನ್ನು ನಿರ್ವಹಿಸಲು ಎಲ್ಲ ರೀತಿಯ ಅನುಕೂಲಗಳನ್ನೂ ಇಲ್ಲಿ ಒದಗಿಸಲಾಗುತ್ತದೆ. ಮಾತ್ರವಲ್ಲ ಮಹಾತ್ಮರಾದ ಔಲಿಯಾಗಳ ಸಂಸ್ಮರಣೆಯಲ್ಲಿ ಭಾಗವಹಿಸುವವರಿಗೆ ತಬರ್ರುಕ್ ವಿತರಣೆ ಮಾಡುವ ಸಲುವಾಗಿ ಅನ್ನ ದಾನ ಮಾಡಲಾಗುತ್ತದೆ.
ಕರ್ನಾಟಕ ಮತ್ತು ಕೇರಳದ ವಿವಿಧ ಭಾಗಗಳಿಂದ ಬಹಳಷ್ಟು ಯಾತ್ರಾರ್ಥಿಗಳು ಈ ಪುಣ್ಯ ಸ್ಥಳಕ್ಕೆ ಆಗಮಿಸಿ ದರ್ಗಾ ಝಿಯಾರತ್ ಮಾಡುತ್ತಾರೆ. ಯಾತ್ರಾರ್ಥಿಗಳ ನೆರವಿಗಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.
ಸೂಫೀ ಶಹೀದ್ (ರ) ರವರ ಮೇಲೆ ದಾಳಿ ಮಾಡಲು ಶತ್ರುಗಳಿಗೆ ಮಹಾನರ ರಹಸ್ಯ ಮಾಹಿತಿಯನ್ನು ಬಹಿರಂಗಪಡಿಸಿದ್ದು ಓರ್ವ ಸ್ತ್ರೀಯಾಗಿರುವುದರಿಂದ ಮಹಿಳೆಯರಿಗೆ ಸೂಫೀ ಶಹೀದ್ (ರ) ರ ಮಖಾಮಿನ ಬಳಿಗೆ ಪ್ರವೇಶವಿಲ್ಲ.
ಸ್ತ್ರೀಯರು ಇಲ್ಲಿ ಝಿಯಾರತ್ ಮಾಡಬಹುದಾದರೂ ಅವರಿಗೆ ಪ್ರತ್ಯೇಕವಾದ ಸ್ಥಳವಿದೆ. ಅಲ್ಲಿ ಮಾತ್ರವೇ ಝಿಯಾರತ್ ನಡೆಸಬಹುದು. ಆದರೆ ಮಖಾಂನ ಹತ್ತಿರ ಹೋಗಲು ಅವಕಾಶವಿಲ್ಲ. ಇದು ಹಿಂದಿನ ಕಾಲದಿಂದಲೂ ಬಂದಂತಹ ರೂಢಿಯಾಗಿದೆ.
ವಿಶೇಷವೆಂದರೆ ಮಹಾನರ ಬಗ್ಗೆಯಾಗಲಿ ಅವರ ಕರಾಮತ್ತಿನ ಬಗ್ಗೆಯಾಗಲೀ ಸಂಶಯಿಸಿದವರ ಮೇಲೆ ಹೆಜ್ಜೇನುಗಳು ದಾಳಿ ಮಾಡುತ್ತವೆ. ಹಾಗೆ ಸಂಶಯಿಸಿದವರ ಮೇಲೆ ಹೆಜ್ಜೇನುಗಳು ದಾಳಿ ಮಾಡಿದ ಉದಾಹರಣೆಗಳು ಬಹಳಷ್ಟಿವೆ.
ದೂರದ ಈಜಿಪ್ಟಿನಲ್ಲಿ ಜನಿಸಿ ಭಾರತಕ್ಕೆ ಬಂದು ನಮ್ಮ ಕರ್ನಾಟಕದಲ್ಲಿ ದೀನೀ ದಅವಾ ನಡೆಸಿ ಎಮ್ಮೆಮಾಡಿನಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಸೂಫೀ ಶಹೀದ್ (ರ) ರವರ ಹಕ್ಕ್ಜಾಹ್ ಬರ್ಕತ್ನಿಂದ ಸೃಷ್ಟಿಕರ್ತನಾದ ಅಲ್ಲಾಹನು ನಮ್ಮೆಲ್ಲರಿಗೂ ಶತ್ರುಗಳ ಕುತಂತ್ರದಿಂದ ಸಂರಕ್ಷಣೆ ನೀಡಿ ಸನ್ಮಾರ್ಗದ ಹಾದಿಯಲ್ಲಿ ಮುನ್ನಡೆಯುವ ಸಜ್ಜನರ ಸಾಲಿನಲ್ಲಿ ನಮ್ಮನ್ನು ಸೇರಿಸುವುದರ ಜೊತೆಗೆ ನಾಳೆ ಸ್ವರ್ಗದಲ್ಲಿ ಮಹಾನರನ್ನು ಭೇಟಿಯಾಗುವ ಸೌಭಾಗ್ಯವನ್ನು ನಮ್ಮೆಲ್ಲರಿಗೂ ಕರುಣಿಸಿ ಅನುಗ್ರಹಿಸಲಿ ಆಮೀನ್.
ದಾರಿ: ಎಮ್ಮೆಮಾಡ್ ಮಖಾಂ ಮಡಿಕೇರಿಯಿಂದ 32 ಕಿಲೋ ಮೀಟರ್ ದೂರದಲ್ಲಿದ್ದು, ನಾಪೋಕ್ಲಿನ ಸಮೀಪದಲ್ಲಿದೆ.
ಇಲ್ಲಿಗೆ ವಾಹನ ಸೌಕರ್ಯಗಳಿರುವುದರಿಂದ ಹಾಗೂ ಉರೂಸಿನ ಸಮಯದಲ್ಲಿ ವಿಶೇಷ ಬಸ್ ಸೌಲಭ್ಯವೂ ಇರುತ್ತದೆ.
Credit: ಗಫೂರ್ ಬಾಯಾರ್